ಸುಬ್ರಹ್ಮಣ್ಯ;ಸೆಪ್ಟೆಂಬರ್ 29:ಸುಬ್ರಮಣ್ಯ ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಉಪವಿಭಾಗದ ಜಂಟಿ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಶುಕ್ರವಾರದಿಂದ ಸುಬ್ರಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಆರಂಭಗೊಂಡಿದೆ. ಈ ಶಿಬಿರ ಎರಡು ದಿನಗಳ ಕಾಲ — ಸೆಪ್ಟೆಂಬರ್ 29 ಮತ್ತು 30ರಂದು — ನಡೆಯಲಿದೆ.
ಬೆಳಗ್ಗೆ 8:30ರ ವೇಳೆಗೆ ಶಿಬಿರ ಸ್ಥಳದಲ್ಲಿ ಜನರು ಸರತಿ ಸಾಲಿನಲ್ಲಿ ನಿಂತು ಸೇವೆ ಪಡೆಯಲು ಆಗಮಿಸಿದ್ದು, ಸಭಾಂಗಣ ಜನರಿಂದ ತುಂಬಿ ತುಳುಕುವಂತಿತ್ತು. ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಅಂಚೆ ಇಲಾಖೆ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮವನ್ ಸೇವಾ ಕೇಂದ್ರದ ಸಿಬ್ಬಂದಿಗಳು ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಮಣ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಎನ್.ಎಸ್. ಅವರು, “ಗ್ರಾಮ ಪಂಚಾಯತ್ ಹಾಗೂ ಅಂಚೆ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಈ ಉಚಿತ ಶಿಬಿರಕ್ಕೆ ಜನರಿಂದ ದೊರೆತಿರುವ ಸ್ಪಂದನೆ ಸಂತೋಷಕರವಾಗಿದೆ. ದೂರದ ಊರುಗಳಿಂದಲೂ ಜನರು ಬೆಳಗ್ಗಿನಿಂದಲೇ ಆಗಮಿಸುತ್ತಿದ್ದು, ಎಲ್ಲ ವ್ಯವಸ್ಥೆಗಳನ್ನು ಪಂಚಾಯತ್ ವತಿಯಿಂದ ಮಾಡಲಾಗಿದೆ,” ಎಂದು ಹೇಳಿದರು.
ಈ ಶಿಬಿರದ ಮೂಲಕ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ ಸೇರಿದಂತೆ ವಿವಿಧ ಆಧಾರ್ ಸಂಬಂಧಿತ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
إرسال تعليق