ಕುಕ್ಕೆ ಸುಬ್ರಹ್ಮಣ್ಯ, ಏಪ್ರಿಲ್ 25: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡ ದುಃಖದ ಹಿನ್ನೆಲೆಯಲ್ಲಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜನಸಾಮಾನ್ಯರು ಭಾವುಕವಾಗಿ ಪ್ರತಿಕ್ರಿಯಿಸಿದರು.
ಹಿಂದೂ ಪರಿವಾರ ಸಂಘಟನೆಗಳ ನೇತೃತ್ವದಲ್ಲಿ, ಶುಕ್ರವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥ ಬೀದಿಯಲ್ಲಿ ಅಂಗಡಿ, ಹೋಟೆಲ್ಗಳನ್ನು ಮುಚ್ಚಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪಾಲ್ಗೊಂಡರು. ನೂರಾರು ಮಂದಿ ಸಾರ್ವಜನಿಕರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಸದಸ್ಯರು ಭಾಗವಹಿಸಿ, ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಭಾಗಿಯಾದ ಜನತೆ ಭಯೋತ್ಪಾದಕರ ವಿರುದ್ದ ಘೋಷಣೆ ಕೂಗಿದರು. "ಇದೊಂದು ನಿಷ್ಠುರ ಕೃತ್ಯ. ಅಮಾಯಕ ಜನರನ್ನು ಕೊಲ್ಲುವುದು ಮಾನವೀಯತೆಯ ವಿರುದ್ಧ" ಎಂದು ವ್ಯಕ್ತಪಡಿಸಿದರು. ಕೆಲವರು ಕಣ್ಣೀರಿನಲ್ಲೇ ತಮ್ಮ ನೋವನ್ನು ಹಂಚಿಕೊಂಡರು.
“ಇದು ಎಲ್ಲ ಭಾರತೀಯರ ಹೃದಯವನ್ನು ನೋಯಿಸಿರುವ ಘಟನೆ. ಇಂಥ ದಾಳಿ ಮರುಕಳಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ,” ಎಂದು ಸ್ಥಳೀಯರೊಬ್ಬರು ಹೇಳಿದರು.
ಇಂತಹ ಶ್ರದ್ಧಾಂಜಲಿ ಸಭೆಗಳು ದೇಶದ ಪ್ರತಿಯೊಬ್ಬ ಪ್ರಜೆ ಒಂದಾಗಿ ನಿಲ್ಲುವ ಸಂಕೇತವಾಗಿದೆ. ಭಯೋತ್ಪಾದಕರ ದೌರ್ಜನ್ಯದ ವಿರುದ್ಧ ದೇಶದ ಜನರು ಒಂದಾಗಿ ಧಿಕ್ಕಾರ ನೀಡುತ್ತಿದ್ದಾರೆ.
إرسال تعليق