“ಅಮ್ಮಾ... ನಾನು ಇವತ್ತು ಶಾಲೆಗೆ ಹೋಗ್ಬೇಕು!” – ಪುಟಾಣಿಗಳ ಮೊದಲ ಹೆಜ್ಜೆಗೆ ಪಟ್ಟೂರಿನಲ್ಲಿ ಹೃದಯಸ್ಪರ್ಶಿ ಸ್ವಾಗತ.


ಕೊಕ್ಕಡ, ಜೂನ್ 5:
ಪಟ್ತೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಇಂದಿನ ದಿನವು ನರ್ಸರಿ ಪುಟಾಣಿಗಳಿಗೆ ಮರೆಯಲಾಗದ ಉತ್ಸವವಾಯಿತು. ಎಲ್‌ಕೆಜಿ ಹಾಗೂ ಯುಕೆಜಿಗೆ ಹೊಸದಾಗಿ ಸೇರಿದ ಪುಟಾಣಿ ಮಕ್ಕಳು, ಮೊಟ್ಟಮೊದಲ ಬಾರಿಗೆ ಪುಸ್ತಕ, ಕಲಿಕೆ, ಸ್ನೇಹ ಮತ್ತು ಆಟದ ಲೋಕಕ್ಕೆ ಕಾಲಿಟ್ಟರು.
ಬೆಳಗಿನ ನಗುಮೊಗದೊಂದಿಗೆ ಶಾಲೆಗೆ ಬಂದ ಪುಟಾಣಿಗಳನ್ನು ಶಾಲಾ ಶಿಕ್ಷಕಿಯರು ಆರತಿ ಬೆಳಗಿ ಆರಾಧನೆಯ ಮನೋಭಾವದಿಂದ ಸ್ವಾಗತಿಸಿದರು. ಪುಟಾಣಿ ಮಕ್ಕಳ ಈ ಹೊಸ ಪಯಣದ ಶುಭಾರಂಭಕ್ಕೆ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೌಲ್ಯ ಶಿಕ್ಷಣ ಪರಿವೀಕ್ಷಕಿ ಮೀನಾಕ್ಷಿ ಮಾತಾಜಿಯವರು ತಿಲಕ ಧರಿಸಿ ಆಶೀರ್ವಾದ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಕ್ಕಳ ಕೈಗೆ ಸಿಹಿ ಹಂಚಿ, “ಶಾಲೆ ಭಯದ ಜಾಗವಲ್ಲ, ಇದು ಪ್ರೀತಿಯ ತೋಟ” ಎಂಬ ಮಂತ್ರವನ್ನು ಹೃದಯತಾಳದಿಂದ ತಲುಪಿಸಿದರು. ನರ್ಸರಿ ವಿಭಾಗದ ಮೇಲ್ವಿಚಾರಕಿ ಶ್ರೀಮತಿ ಸ್ವಾತಿ ಕೆ. ವಿ. ಹಾಗೂ ಶಾಲೆಯ ಎಲ್ಲ ಶಿಕ್ಷಕರೂ ಮಕ್ಕಳೊಂದಿಗೆ ಒಂದಾಗಿ ಈ ದಿನವನ್ನು ಒಂದು ಹಬ್ಬದಂತೇ ರೂಪಿಸಿದರು.

ಚಂದನ ತಿಲಕ, ಚೂಟಿಯು ಹಾಕಿದ ಮುಖ, ಹೊಸ ಬ್ಯಾಗು ಹಿಡಿದ ಚಿಕ್ಕ ಕೈಗಳು, ತಾಯಿ ಕೈ ಬಿಡದೇ ಹೆಜ್ಜೆ ಇಟ್ಟ ಮೊದಲ ಹೊತ್ತು – ಈ ದೃಶ್ಯ ತಾಯಂದಿರ ಕಣ್ಣುಗಳನ್ನು ತಣಿಸಲು ಕಷ್ಟವಾಯ್ತು. ಮಕ್ಕಳು ಕೂಡ ಕೆಲವರು ನಗುತಾ, ಕೆಲವರು ಅಳುತ್ತಾ... ಆದರೆ ಹೊಸ ಜಗತ್ತನ್ನು ಅರಿಯುವ ಕುತೂಹಲ ಅವರ ಕಣ್ಣುಗಳಲ್ಲಿ ಸುಂದರವಾಗಿ ಮೂಡಿತ್ತು.

ಈ ಪ್ರಾರಂಭೋತ್ಸವವು ಮಕ್ಕಳಲ್ಲಿ ನಂಬಿಕೆ, ಧೈರ್ಯ ಮತ್ತು ವಿದ್ಯೆಯ ಪ್ರೀತಿ ಬೆಳೆಸುವ ಪ್ರಥಮ ಪಾಠವಾಗಲಿದೆ ಎಂಬ ವಿಶ್ವಾಸದಿಂದ ಶಾಲಾ ವಾತಾವರಣವೂ ಸಂತೋಷಮಯವಾಯಿತು.

Post a Comment

Previous Post Next Post