*ಈ ರಮೇಶ ಉಪಾಧ್ಯಾಯ. ಕಲ್ಲೇರಿ, ರಾಮಕುಂಜ (ನಿವೃತ್ತ ಶಿಕ್ಷಕರು)*
**********************
*ಬದುಕಲು ಕಲಿಸಿದ ಗುರುಗಳು*
ನನ್ನ ಬಾಲ್ಯದ ಶಾಲಾ
ದಿನಗಳಲ್ಲಿ ಹಾಗೂ ಇಂದಿಗೂ ಗುರುಗಳಾಗಿರುವವರು ರಾಮಕುಂಜದ ಕಲ್ಲೇರಿ ಈ ರಮೇಶ ಉಪಾಧ್ಯಾಯರು. ಶಾಲಾ ದಿನಗಳಲ್ಲೇ ಪಾಠದ ಜೊತೆಗೆ ಬದುಕಿನ ಶಿಕ್ಷಣವನ್ನು ಮಾಡುತ್ತಾ - ಮಾಡಿಸುತ್ತಾ ಆದರ್ಶತೆ ಮೆರೆದವರು . ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಶಾಲೆಗೆ ಸುಣ್ಣ ಬಣ್ಣ ಹಚ್ಚುವುದು, ಬಣ್ಣದ ಕಾಗದದಿಂದ ಸಿಂಗರಿಸುವುದು, ತಳಿರು ತೋರಣ ಕಟ್ಟುವುದು, ನಾಟಕದಲ್ಲಿ ಅಭಿನಯ, ಪರದೆ ಕಟ್ಟುವುದು, ನಾಟಕದ ಸ್ಟೇಜಿಗೆ ಚಪ್ಪರ ಹಾಕುವುದು ಹೀಗೆ ಎಲ್ಲಾ ಬಗೆಯ ತರಬೇತಿ ನೀಡಿ ಬೆಳೆಸಿರುವರು. ಇದು ನನ್ನ ಶಿಕ್ಷಕ ವೃತ್ತಿಗೆ ಭದ್ರ ಬುನಾದಿಯಾಯಿತು. ನನ್ನ ವಿದ್ಯಾರ್ಥಿಗಳಿಗೂ ಅದನ್ನು ದಾಟಿಸಿ ಅವರ ಪ್ರೀತಿ ಗಳಿಸಿದೆ. ನಾನು ಶಿಕ್ಷಕ ವೃತ್ತಿಗೆ ಕಾಲಿಟ್ಟ ನಂತರವೂ ಊರಿನ ಅನೇಕ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ನನ್ನನ್ನು ಜೊತೆ ಸೇರಿಸಿಕೊಂಡು ಮುನ್ನಡೆಸಿದರು.
ಒಂದು ಯೋಜನೆಯ ಹತ್ತಾರು ಮುಖಗಳನ್ನು ಯೋಚಿಸಿ ಸಾಧಕ ಬಾಧಕ ತಿಳಿಸಬಲ್ಲವರು. ಯಾರ ಮೇಲು ಹೀಗೇ ಆಗಬೇಕೆಂದು ಒತ್ತಡ ಹೇರಿದವರಲ್ಲ. ಗಟ್ಟಿ ಮಾತುಗಳಿದ್ದರೂ ಮೃದು ಹೃದಯವಿತ್ತು. ನನ್ನ ಲೇಖನಗಳು- ಬರೆದ ಪುಸ್ತಕಗಳನ್ನು ಓದಿ ಬೆನ್ನುತಟ್ಟಿ ಸ್ಪೂರ್ತಿ ತುಂಬಿದವರು. ನನ್ನ ಮಾತಿನ ವೈಖರಿಯನ್ನು ಪ್ರಶಂಸಿಸಿ ಹುರಿದುಂಬಿಸಿದವರು. 95 ವರ್ಷ ವಯಸ್ಸಿನ ನನ್ನ ನೆಚ್ಚಿನ ವಿದ್ಯಾ ಗುರುಗಳು ಇಂದಿಗೂ ಅತ್ಯಂತ ಉತ್ಸಾಹಿಗಳಾಗಿರುವರು. ಸಪ್ಟಂಬರ್ 5 ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅವರಿಗೆ ನನ್ನ ದೀರ್ಘ ದಂಡ ನಮಸ್ಕಾರಗಳು.
*ಟಿ ನಾರಾಯಣ ಭಟ್ ರಾಮಕುಂಜ*
*ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು*
Post a Comment