ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್‌ನಿಂದ ಚಿನ್ನಾಭರಣ ಕಳವು – ಐದು ಮಂದಿ ಬಂಧನ.

ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಕಳವು ಪ್ರಕರಣವನ್ನು ಬಜಪೆ ಪೊಲೀಸರು ಪತ್ತೆಹಚ್ಚಿ ಐದು ಮಂದಿಯನ್ನು ಬಂಧಿಸಿದ್ದಾರೆ.

30-08-2025 ರಂದು ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದ ಮಹಿಳಾ ಪ್ರಯಾಣಿಕರೊಬ್ಬರ ಬ್ಯಾಗೇಜ್‌ನಿಂದ 56 ಗ್ರಾಂ ತೂಕದ, ಸುಮಾರು ₹4.5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಆಗಿದ್ದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆಯಲ್ಲಿ ಏರ್ ಇಂಡಿಯಾ SATS ಕಂಪನಿಯಲ್ಲಿ ಲೋಡರ್-ಅನ್ಲೋಡರ್ ಕೆಲಸ ಮಾಡುತ್ತಿದ್ದ ನಾಲ್ವರು ಸಿಬ್ಬಂದಿ – 
ಕಂದಾವರದ ನಿತಿನ್, 


ಮೂಡುಪೆರಾರದ ಸದಾನಂದ ಮತ್ತು
 ರಾಜೇಶ್, 
ಬಜಪೆಯ ಪ್ರವೀಣ್ ಫೆರ್ನಾಂಡಿಸ್ – ಇವರೇ ಕಳವು ನಡೆಸಿರುವುದು ಬಹಿರಂಗವಾಗಿದೆ. ಇವರಿಂದ ಕಳುವಾದ ಚಿನ್ನವನ್ನು ಖರೀದಿಸಿದ್ದ

 ಮೂಡುಪೆರಾರದ ರವಿರಾಜ್ ಎಂಬವನನ್ನೂ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಆರೋಪಿಗಳಿಂದ 50 ಗ್ರಾಂ ಚಿನ್ನದ ಗಟ್ಟಿ (ಮೌಲ್ಯ ₹5 ಲಕ್ಷ) ಹಾಗೂ ಈ ಹಿಂದೆ ಜನವರಿ 2025ರಲ್ಲಿ ಪ್ರಯಾಣಿಕ ಮನೋಹರ್ ಶೆಟ್ಟಿ ಅವರ ಬ್ಯಾಗಿನಿಂದ ಕಳವು ಮಾಡಿದ್ದ ₹2 ಲಕ್ಷ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕಳೆದ ಒಂಬತ್ತು ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪ್ರಯಾಣಿಕರ ಬ್ಯಾಗೇಜ್‌ನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಹುಡುಕಿ, ಸುಲಭ ಪಾಸ್‌ವರ್ಡ್ ಲಾಕ್ ತೆರೆಯುವ ಮೂಲಕ ಕಳವು ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಯಾಣಿಕರು ಚಿನ್ನಾಭರಣ ಹಾಗೂ ನಗದು ಹೀಗೆ ಬೆಲೆ ಬಾಳುವ ವಸ್ತುಗಳನ್ನು ಲಗೇಜ್‌ನಲ್ಲಿ ಕಳುಹಿಸದೆ, ಜಾಗೃತೆಯಿಂದ ನಡೆದುಕೊಳ್ಳಬೇಕೆಂದು ಮಂಗಳೂರು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

Post a Comment

Previous Post Next Post