ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರ ಗದ್ದೆಯಲ್ಲಿ ಜನವರಿ 26ರಂದು ಹರೀಶ್ ಇಂಜಾಡಿ ಹಿತೈಷಿಗಳ ಬಳಗದಿಂದ ಆಯೋಜಿಸಲಾದ ಹರಕೆಯ ಕೊರಗಜ್ಜ ಕೋಲ ಭಕ್ತಿಭಾವದಿಂದ ನೆರವೇರಿತು.
ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಜ್ಯೋತಿಷಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ರಾಜಕೀಯ ಹಾಗೂ ಪ್ರಸಿದ್ಧ ಗಣ್ಯ ವ್ಯವ್ಯಕ್ತಿಗಳ ಧಾರ್ಮಿಕ ಸಲಹೆಗಾರರಾದ ಡಾ.ದ್ವಾರಕನಾಥ್ ಅವರು ಭಾಗವಹಿಸಿ, ದೈವ ಆರಾಧನೆಯಲ್ಲಿ ಶ್ರದ್ಧಾಪೂರ್ವಕವಾಗಿ ಪಾಲ್ಗೊಂಡರು.
ಹರೀಶ್ ಇಂಜಾಡಿ ಅವರ ಆಪ್ತರಾಗಿರುವ ದ್ವಾರಕನಾಥ್ ಅವರು, ಈ ಪವಿತ್ರ ಕೋಲ ಸೇವೆಯಲ್ಲಿ ಉಪಸ್ಥಿತರಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಧಾರ್ಮಿಕ ಮಹತ್ವವನ್ನು ನೀಡಿತು.
ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು, ದೈವ ಸೇವೆಗೆ ಸಾಕ್ಷಿಯಾದರು. ಸ್ಥಳೀಯ ಭಕ್ತರು, ಹರಕೆಯೊಂದಿಗೆ ಭಾಗವಹಿಸಿದವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೈವಕ್ಕೆ ಪೂಜೆ ಸಲ್ಲಿಸಿದರು.
ಕೊರಗಜ್ಜ ದೈವದ ಕೋಲವು ತುಳುನಾಡಿನ ಪರಂಪರೆ, ನಂಬಿಕೆ ಹಾಗೂ ಶ್ರದ್ಧೆಯ ಪ್ರತೀಕವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಪರಿಸರದಲ್ಲಿ ಈ ಸೇವೆ ನಡೆಯುವುದರಿಂದ ಭಕ್ತರಲ್ಲಿ ವಿಶೇಷ ಭಕ್ತಿಭಾವ ಮೂಡಿತು.
إرسال تعليق