ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ನೇಮಕಾತಿ ಕುರಿತು ರಿಟ್: ತಡೆಯಾಜ್ಞೆ ನೀಡದೆ ವಿಚಾರಣೆ ಮುಂದೂಡಿದ ಮಾನ್ಯ ಹೈಕೋರ್ಟ್.


ಕುಕ್ಕೆ ಸುಬ್ರಹ್ಮಣ್ಯ, ಜೂನ್ 4: ಪ್ರಸಿದ್ಧ ಧಾರ್ಮಿಕ ತೀರ್ಥಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇಮಕಾತಿ ವಿಚಾರವಾಗಿ ಜೂನ್ 3ರಂದು ನಡೆದ ಹೈಕೋರ್ಟ್ ವಿಚಾರಣೆಯಲ್ಲಿ ನ್ಯಾಯಾಲಯವು ತಡೆಯಾಜ್ಞೆ ನೀಡದೆ ವಿಚಾರಣೆಯನ್ನು ಮುಂದೂಡಿದೆ.

ಇತ್ತೀಚೆಗೆ ಕರ್ನಾಟಕ ಸರ್ಕಾರವು ಒಟ್ಟು 9 ಸದಸ್ಯರ ಸಮಿತಿಯನ್ನು ರಚಿಸಿ, ಅದರಲ್ಲಿ ಅಧ್ಯಕ್ಷ ಹಾಗೂ ಇತರ ಸದಸ್ಯರನ್ನು ನೇಮಕಮಾಡಿದ್ದು, ಅವರು ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಈ ನೇಮಕಾತಿಯನ್ನು ಪ್ರಶ್ನಿಸುತ್ತಾ ಆಕಾಶ್ ಎಂಬುವವರು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಸಮಿತಿಯ ರಚನೆಯನ್ನು ತಡೆಹಿಡಿಯುವಂತೆ ಹಾಗೂ ಇತ್ತೀಚೆಗೆ ರಚಿಸಲಾದ ಸಮಿತಿಯನ್ನು ವಜಾಗೊಳಿಸಲು ಮನವಿ ಮಾಡಿದ್ದರು.

ಈ ಅರ್ಜಿ ಕುರಿತು ಹೈಕೋರ್ಟ್‌ನಲ್ಲಿ ಇದುವರೆಗೆ ನಾಲ್ಕು ಬಾರಿ ವಿಚಾರಣೆ ನಡೆದಿದ್ದು, ಪ್ರತಿಬಾರಿ ವಿಚಾರಣೆ ಮುಂದೂಡಲಾಗಿದೆ. ಜೂನ್ 3ರಂದು ನಡೆದ ಕಲಾಪದಲ್ಲಿಯೂ ನ್ಯಾಯಾಲಯ ತಡೆಯಾಜ್ಞೆ ನೀಡದೆ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದೆ.

ಈ ಮೂಲಕ ಸಮಿತಿಯ ಅಸ್ತಿತ್ವ ಹಾಗೂ ಅದರ ಚಟುವಟಿಕೆಗಳಲ್ಲಿ ಪ್ರಸ್ತುತ ಯಾವುದೇ ಕಾನೂನು ತೊಡಕುಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಪ್ರಕರಣದಲ್ಲಿ ಅರ್ಜಿದಾರನಾಗಿ ಆಕಾಶ್ ಹಾಗೂ ಪ್ರತಿವಾದಿಯಾಗಿ ಕರ್ನಾಟಕ ರಾಜ್ಯ ಸರ್ಕಾರ ಪಾಲ್ಗೊಂಡಿದ್ದು, ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಹಲವಾರು ಊಹಾಪೋಹಗಳು ಹರಡುತ್ತಿದ್ದರೂ, ನ್ಯಾಯಾಲಯದ ಅಂತಿಮ ತೀರ್ಪುಗಾಗಿ ಕಾಯಬೇಕಾಗಿದೆ.

Post a Comment

Previous Post Next Post