ಜನವರಿ 17, 2025ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ) ಸೊಸೈಟಿ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ, 13.5 ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಇಂದು ಶಾಖಾ ಮ್ಯಾನೇಜರ್ ವಾಣಿ ಆಳ್ವ ಅವರಿಗೆ ಹಸ್ತಾಂತರಿಸಲಾಗಿದೆ.
ಈ ಪ್ರಕರಣದಲ್ಲಿ ತಮಿಳುನಾಡು ಮತ್ತು ಸ್ಥಳೀಯ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, 18 ಕೆ.ಜಿ 360.302 ಗ್ರಾಂ ಚಿನ್ನಾಭರಣ ಮತ್ತು ನಗದು ಹಣವನ್ನು (ಒಟ್ಟು ಮೌಲ್ಯ ₹13.5 ಕೋಟಿ) ವಶಪಡಿಸಿಕೊಳ್ಳಲಾಗಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ನಂತರ ಮಾನ್ಯ ನ್ಯಾಯಾಲಯ ಡಿಸ್ ಸಂಖ್ಯೆ 499/2025 ದಿನಾಂಕ 03-07-2025 ರಂದು ನೀಡಿದ ಆದೇಶದಂತೆ, ವಶಪಡಿಸಿಕೊಳ್ಳಲಾದ ಆಸ್ತಿಗಳನ್ನು ವೀಡಿಯೋಗ್ರಾಫಿ ಮತ್ತು ಫೋಟೋಗ್ರಾಫಿಯ ಸಾನ್ನಿಧ್ಯದಲ್ಲಿ, ಶಾಖಾ ಮ್ಯಾನೇಜರ್ ಹಾಗೂ ಜಿ.ಪಿ.ಎ ದಾರರಾದ ಶ್ರೀಮತಿ ವಾಣಿ ಆಳ್ವ ಅವರಿಗೆ ಪಂಚಾಯತುದಾರರಾದ ಶ್ರೀ ದಿವ್ಯರಾಜ್ ಮತ್ತು ಶ್ರೀ ವಿಕಾಸ್ ಅವರ ಸಮ್ಮುಖದಲ್ಲಿ ಮೌಲ್ಯ ಪರಿಶೀಲನೆ ನಡೆಸಿ ಹಸ್ತಾಂತರಿಸಲಾಯಿತು.
ಈ ಪ್ರಕರಣವನ್ನು ಪೂರ್ತಿಯಾಗಿ ತನಿಖೆ ನಡೆಸಿ ಹಕ್ಕುಸ್ಥರಿಗೆ ಆಸ್ತಿಯನ್ನು ಹಿಂತಿರುಗಿಸುವಲ್ಲಿ ಮಂಗಳೂರು ನಗರ ಪೊಲೀಸರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿದ್ದಾರೆ.
Post a Comment