ಪುತ್ತೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕನನ್ನು ನಿಲ್ಲಿಸುವ ವೇಳೆ ಪೊಲೀಸರ ಹಲ್ಲೆಯ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ದಿನಾಂಕ 17-10-2025 ರಂದು ಸಂಜೆ ವೇಳೆ ಪುತ್ತೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಕುರಿಯ ಗ್ರಾಮದ ನಿವಾಸಿ ಬಶೀರ್ ಎಂಬ ಆಟೋ ಚಾಲಕ ಸಮವಸ್ತ್ರ ಧರಿಸಿ ವಾಹನ ಚಲಾಯಿಸುತ್ತಿದ್ದನು. ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ 2283 ಶೈಲ ಎಂ.ಕೆ ಅವರು ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದರೂ ಚಾಲಕ ಬಶೀರ್ ವಾಹನ ನಿಲ್ಲಿಸದೆ ಮುಂದುವರಿದಿದ್ದನು.
ಘಟನೆಯ ನಂತರ ಪೊಲೀಸರು ಆತನನ್ನು ಹಿಂಬಾಲಿಸಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿ, ಸಂಚಾರ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.
ಘಟನೆಯ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.
Post a Comment