ಕುಕ್ಕೆ ಸುಬ್ರಹ್ಮಣ್ಯ, ಮೇ 28 – ಪ್ರಸಿದ್ಧ ತೀರ್ಥಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗಾಗಿ ಹೊಸದೊಂದು ಸಹಾಯಧರ್ಮದ ಯೋಜನೆಗೆ ದೇವಸ್ಥಾನ ಆಡಳಿತ ಸಮಿತಿ ಚಾಲನೆ ನೀಡುತ್ತಿದೆ. ಮೇ 30ರಂದು ಬೆಳಿಗ್ಗೆ 8 ಗಂಟೆಗೆ 'ಉಚಿತ ಬೆಳಗಿನ ಉಪಹಾರ ಯೋಜನೆ'ಯನ್ನು ಅಧಿಕೃತವಾಗಿ ಆರಂಭಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಸಮಿತಿ ಅಧ್ಯಕ್ಷರು, "ಭಕ್ತರಿಗೆ ಹೆಚ್ಚು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ಪ್ರತಿದಿನ ಬೆಳಿಗ್ಗೆ 8 ರಿಂದ 10ರವರೆಗೆ ಉಪಹಾರವನ್ನು ನೀಡಲಾಗುವುದು. ಇದು ದೇವರ ಪ್ರಸಾದದ ರೂಪದಲ್ಲಿ ಲಭ್ಯವಾಗುತ್ತದೆ," ಎಂದು ಹೇಳಿದರು.
ಈ ಉಪಹಾರ ವ್ಯವಸ್ಥೆಯಲ್ಲಿ ಉಪ್ಪಿಟ್ಟು, ಅವಲಕ್ಕಿ, ಹೆಸರುಕಾಳು, ಪುಳಿಯೋಗರೆ, ಪೊಂಗಲ್ ಮುಂತಾದ ಆಹಾರಗಳೊಂದಿಗೆ ಕಷಾಯವನ್ನೂ ನೀಡಲಾಗುತ್ತದೆ. ಪ್ರತಿದಿನ ಒಂದೊಂದು ಬಗೆಯ ಉಪಹಾರ ಸಿಗಲಿದ್ದು, ಇದು ಷಣ್ಮುಖ ಭೋಜನ ಶಾಲೆಯಲ್ಲಿ ಲಭ್ಯವಿರುತ್ತದೆ.
"ಈ ಯೋಜನೆ ಭಕ್ತರಲ್ಲಿ ಸಂತೋಷ ಮೂಡಿಸುತ್ತದೆ ಎಂಬ ವಿಶ್ವಾಸವಿದೆ. ಯಾವುದೇ ನ್ಯೂನತೆಗಳಿದ್ದರೆ ಭಕ್ತಾದಿಗಳು ಸಲಹೆ-ಸೂಚನೆ ನೀಡಬೇಕು. ಈ ಸೇವೆ ಶತಮಾನದ ಕಾಲ ಮುಂದುವರಿಯಲಿ ಎಂಬ ಆಶಯವಿದೆ," ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀ ಅಶೋಕ್ ನೆಕ್ರಾಜೆ, ಶ್ರೀಮತಿ ಸೌಮ್ಯಭರತ್, ಶ್ರೀ ಪವನ್ ಎಂ.ಡಿ, ಶ್ರೀಮತಿ ಲೀಲಾ ಮನೋಹರ್, ಶ್ರೀಮತಿ ಪ್ರವೀಣ ಮರವಂಜ ಹಾಗೂ ಶ್ರೀ ಅಜಿತ್ ಉಪಸ್ಥಿತರಿದ್ದರು.
ಮಾಧ್ಯಮ ಪ್ರತಿನಿಧಿಗಳು ಈ ಸಂದರ್ಭದಲ್ಲಿ ದೇವಸ್ಥಾನದ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಶ್ನೆಗಳನ್ನು ಮುಂದಿಟ್ಟರು.
ಉದ್ಘಾಟನಾ ದಿನವಾದ ಮೇ 30ರಂದು ನಡೆಯುವ ವಿಶೇಷ ಸಮಾರಂಭಕ್ಕೆ ಎಲ್ಲ ಭಕ್ತರಿಗೂ ಆಹ್ವಾನ ನೀಡಲಾಗಿದೆ.
Post a Comment