ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಯಲ್ಲಿ 2025-26ನೇ ಸಾಲಿನ ಲಲಿತಾ ಕಲಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಆಯ್ಕೆ ಸ್ಪರ್ಧೆ ದಿನಾಂಕ 29-09-2025 ಸೋಮವಾರದಂದು ಭಾವೈಕ್ಯತೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಅವರ ಅನುಪಸ್ಥಿತಿಯಲ್ಲಿ ಡಾ. ಸೀತಾರಾಮ ಪಿ ವಹಿಸಿ, “ವ್ಯಕ್ತಿ ಮತ್ತು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಮಹತ್ವದ್ದು. ಸಾಂಸ್ಕೃತಿಕ ವಿಭಿನ್ನತೆಯ ಅಸ್ಮಿತೆಯ ಉಳಿವು ಅತ್ಯಗತ್ಯ” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಇತಿಹಾಸ ಉಪನ್ಯಾಸಕ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತ ಶ್ರೀ ವಿಶ್ವನಾಥ ಶೆಟ್ಟಿ, ಕಾರ್ಯಕ್ರಮವನ್ನು ಉದ್ಘಾಟಿಸಿ, ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸಲು ಮತ್ತು ಭವಿಷ್ಯ ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಪ್ರೇರಣಾದಾಯಕ ನುಡಿಗಳನ್ನಾಡಿದರು.
ಲಲಿತಾ ಕಲಾ ಸಂಘದ ಸಂಚಾಲಕಿ ಶ್ರೀಮತಿ ಪಾವನ ರೈ ಪ್ರಸ್ತಾವಿಕ ನುಡಿಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಚಂದ್ರಕಲಾ ವಂದನೆ ಸಲ್ಲಿಸಿದರು. ಕುಮಾರಿ ಕೈರುನ್ನಿಸಾ (ದ್ವಿತೀಯ ಬಿಕಾಂ) ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿದರು.
ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಪ್ರತಿಭಾ ಆಯ್ಕೆ ಸ್ಪರ್ಧೆಗಳು ಜರುಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Post a Comment