ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನವರಿ 27ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಸೌಹಾರ್ದತೆ, ಜನಕಲ್ಯಾಣ ಹಾಗೂ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಹಾರಾಜರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಭಕ್ತಿಭಾವ ತುಂಬಿದ ವಾತಾವರಣ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ದೇವಾಲಯದ ಅಧಿಕಾರಿಗಳು ಮೈಸೂರು ಮಹಾರಾಜರಿಗೆ ಅದ್ಭುತ ಪೂರ್ವ ಸ್ವಾಗತ ನೀಡಿ ಗೌರವಿಸಿದರು. ದೇವಾಲಯದ ಪರಂಪರೆಯಂತೆ ಶಾಲು ಹೊದಿಸಿ, ಫಲಪುಷ್ಪಗಳನ್ನು ಅರ್ಪಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮೈಸೂರು ರಾಜವಂಶದ ಮಹಾರಾಜರ ಈ ಭೇಟಿ ಕ್ಷೇತ್ರದ ಭಕ್ತರಲ್ಲಿ ವಿಶೇಷ ಸಂತಸ ಮೂಡಿಸಿದ್ದು, ಶ್ರೀ ಕ್ಷೇತ್ರದ ಧಾರ್ಮಿಕ ಮಹತ್ವಕ್ಕೆ ಮತ್ತೊಂದು ಗೌರವ ಸೇರ್ಪಡೆಗೊಂಡಂತಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು.
Post a Comment