ಕಡಬ: ಮಂಗಳೂರುನಿಂದ ಕಡಬ ಕಲ್ಲುಗುಡ್ಡೆ ಕಡೆಗೆ ಸಂಚರಿಸುತ್ತಿದ್ದ Karnataka State Road Transport Corporation (ಕೆಎಸ್ಆರ್ಟಿಸಿ) ಬಸ್ ರಾಮಕುಂಜ ತಲುಪುತ್ತಿದ್ದಂತೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ತಾಂತ್ರಿಕ ದೋಷ ಉಂಟಾಯಿತು. ಬಸ್ನ ಎದುರಿನ ಹೆಡ್ಲೈಟ್ ಹಾಗೂ ಒಳಗಿನ ಲೈಟ್ಗಳು ಏಕಾಏಕಿ ನಿಂತು ಉರಿಯದ ಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು.
ಹಿಂದಿನಿಂದ ಬರುತ್ತಿದ್ದ ನವೀನ್ ಕಲ್ಲಾಜೆ ಅವರು ಸಮಸ್ಯೆಯನ್ನು ಗಮನಿಸಿ ಪತ್ರಕರ್ತ ದಿವಾಕರ ಯಂ ಅವರ ಗಮನಕ್ಕೆ ತಂದರು. ಘಟನೆ ತಿಳಿದ ಕೂಡಲೇ ದಿವಾಕರ ಅವರು ಬಸ್ ಕಡಬದತ್ತ ಸಾಗುತ್ತಿದ್ದ ವೇಳೆ ವಿಡಿಯೋ ಚಿತ್ರೀಕರಿಸಿ ಚಾಲಕರ ಗಮನ ಸೆಳೆದರು. ಚಾಲಕರು ತಕ್ಷಣವೇ ಬಸ್ ನಿಲ್ಲಿಸಿ ಪರಿಶೀಲನೆ ನಡೆಸಿದರು.
ಈ ಬಸ್ ಕಲ್ಲುಗುಡ್ಡೆ ಕಡೆಗೆ ಆ ದಿನದ ಕೊನೆಯ ಸರ್ವೀಸ್ ಆಗಿದ್ದು, ಮುಂದಿನ ದಿನ ಬೆಳಿಗ್ಗೆ ಮಕ್ಕಳ ಶಾಲಾ ಪ್ರವಾಸವೂ ನಿಗದಿಯಾಗಿದ್ದ ಕಾರಣ ಪ್ರಯಾಣಿಕರು ಹಾಗೂ ಕಂಡಕ್ಟರ್ ಬಸ್ ಮುಂದುವರಿಸಲು ವಿನಂತಿಸಿದರು. ಬಳಿಕ ಕಡಬ ಪೇಟೆ ತಲುಪಿದಾಗ ಸಮಸ್ಯೆಯ ಗಂಭೀರತೆ ಮತ್ತೊಮ್ಮೆ ತಿಳಿಸಲಾಯಿತು.
ದಿವಾಕರ ಅವರು ಆಲಿ ಹಳೆ ಸ್ಟೇಷನ್ ಹಾಗೂ ರಮೀಜ್ ಪಿಜಕ್ಕಳ ಅವರ ಸಹಕಾರದಿಂದ ಕಡಬದ ಸ್ಥಳೀಯ ಎಲೆಕ್ಟ್ರಿಷಿಯನ್ರನ್ನು ಕರೆಸಿ ತುರ್ತು ದುರಸ್ತಿ ಮಾಡಿಸಿದರು.ಕೇವಲ ₹50 ವೆಚ್ಚದಲ್ಲಿ , ದುರಸ್ತಿ ಕಾರ್ಯದ ಬಳಿಕ ಬಸ್ ಸುರಕ್ಷಿತವಾಗಿ ಮುಂದಿನ ಪ್ರಯಾಣ ಆರಂಭಿಸಿತು.
ಘಟನೆಯ ಆರಂಭದಲ್ಲಿ ಸ್ವಲ್ಪ ಅಸಮಾಧಾನ ವ್ಯಕ್ತಪಡಿಸಿದ್ದ ಚಾಲಕ, ನಂತರ ದುರಸ್ತಿ ಕಾರ್ಯ ಯಶಸ್ವಿಯಾದ ಬಳಿಕ ಸಹಕರಿಸಿದವರಿಗೆ ಧನ್ಯವಾದ ತಿಳಿಸಿ ಬಸ್ನ್ನು ಕಲ್ಲುಗುಡ್ಡೆ ಕಡೆಗೆ ಹೊರಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವುದಕ್ಕಿಂತ ತಕ್ಷಣ ಕ್ರಮ ಕೈಗೊಂಡು ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಿರುವುದು ಪತ್ರಕರ್ತನ ನೈಜ ಸಾಮಾಜಿಕ ಜವಾಬ್ದಾರಿಯ ಉದಾಹರಣೆಯಾಗಿದೆ. ದಿವಾಕರ ಅವರ ಈ ಕ್ರಮವನ್ನು ಸಾರ್ವಜನಿಕರು ಶ್ಲಾಘನೀಯ ಕಾರ್ಯವೆಂದು ಪರಿಗಣಿಸಿದ್ದಾರೆ.
Post a Comment