ಬಿಳಿನೆಲೆ ಗಾಳಿ ಮಳೆ ಹಾನಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಶೀಘ್ರ ಪರಿಹಾರಕ್ಕೆ ಸೂಚನೆ.

ಕಡಬ: ಬಿಳಿನೆಲೆ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಯಿಂದ ಹಲವಾರು ಕೃಷಿ ತೋಟಗಳು ಹಾನಿಗೊಳಗಾದ ಹಿನ್ನೆಲೆ ಮಾರ್ಚ್ 3 ರಂದು ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಡಬ ತಹಶೀಲ್ದಾರರು ಹಾಗೂ ಪುತ್ತೂರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ತೋಟಗಳನ್ನು ವೀಕ್ಷಿಸಿದ ಶಾಸಕಿ, ಬೆಳೆ ನಷ್ಟದ ಸಂಪೂರ್ಣ ಮಾಹಿತಿಯನ್ನು ಪಡೆದು ತಕ್ಷಣ ಸಮಗ್ರ ಸರ್ವೆ ನಡೆಸುವಂತೆ ಸೂಚಿಸಿದರು.
ಗಾಳಿ ಮಳೆಯಿಂದ ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಳಿನೆಲೆ C.A ಬ್ಯಾಂಕ್ ಅಧ್ಯಕ್ಷ ವಾಡ್ಯಪ್ಪ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಭೂಮಾಪನಾ ಅಧಿಕಾರಿ ಪೃಥ್ವಿ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಪ್ರಮುಖರಾದ ಮಧುಸೂದನ್ ಕೊಂಬಾರು, ಕಿಶೋರ್ ಶಿರಾಡಿ, ಪ್ರಸಾದ್ ನೆಟ್ಟಣ, ದೀಕ್ಷಿತ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೃಷಿಕರು ಕೂಡ ತಕ್ಷಣ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Post a Comment

Previous Post Next Post